Sunday 7 July 2019

ಕೇರಡಿಕೆ.

ಕಂಗಳ ತುಂಬ ಕಂದನ ಕನಸು
ಅರಳಿದೆ ಮಗಳೇ ನಿನ್ನಯ ಮನಸು
ಗಂಡೇ ಇರಲಿ ಹೆಣ್ಣೇ ಇರಲಿ
ಮನಸಾರೆ ನೀ ಪ್ರೀತಿಸು..💞
ಅಕ್ಕನ ಸೊಸೆಯ ಕುಬುಸದ ಸಂದರ್ಭದಲ್ಲಿ ಈ ಹಾಡನ್ನ ಹೇಳೋವಾಗ ಚಿಗಳಿ ಮಾಡಿಕೊಂಡು ಹೋಗಿದ್ದೆ.
ಸರಿ.. ಮತ್ತೆ ಊಟದ ಬಳಿಕ ಮುಖ ಶುದ್ಧಿಗೆ ಏನಾದ್ರೂ ಬೇಕಲ್ವಾ?
‘ಕೇರಡಿಕೆ’ ಹ್ಯಾಗೆ ಮಾಡೋದೂಂತ ಹೇಳ್ತೀನಿ.
ಬಾಳಂತಿಯರಿಗಾಗಿಯೇ ವಿಶೆಷ ರೀತಿಯಲ್ಲಿ ಮಾಡಲಾಗುವ ಅಡಿಕೆ. ಬಾಳಂತಿಗೆ ಊಟದ ಬಳಿಕ ತಾಂಬೂಲ ಕೊಡ್ತಾರೆ. ಯಾಕೆ ಗೊತ್ತಾ?
ತಾಂಬೂಲವು ಖಾರ, ಹುಳಿ, ಉಷ್ಣ, ಮಧುರ, ಕ್ಷಾರ ಮತ್ತು ಒಗರೆಂಬ ರುಚಿಗಳುಳ್ಳದ್ದು. ವಾತ, ಕಫಗಳನ್ನು ಪರಿಹರಿಸುವ, ಬಾಯಿ ವಾಸನೆಯನ್ನು ಹೋಗಲಾಡಿಸುವ, ಉದರದಲ್ಲಿ ಅನಾರೋಗ್ಯಕ್ಕೆ ಕಾರಣವಾದ ಕ್ರಿಮಿಗಳನ್ನು ನಾಶ ಮಾಡುವ, ಮುಖಕ್ಕೆ ಆಭರಣವಾಗಿರುವ
(ತಾಂಬೂಲವನ್ನು ಸವಿದಾಗ ತುಟಿಗಳು ಕೆಂಪಾಗುವುದರಿಂದ), ವಿಶುದ್ಧಕಾರಕವಾಗಿಯೂ ಇರುವ ಈ ತಾಂಬೂಲವು ಗಂಡು ಹೆಣ್ಣುಗಳ ಮಿಲನವನ್ನು ಪ್ರಚೋದಿಸುವಂತಹದು ಆಗಿದೆ. ಅಡಿಕೆ-ಎಲೆಯನ್ನು ಸುಣ್ಣದ ಜೊತೆ ಹದವಾಗಿ ಬೆರೆಸಿ ಅಗೆದಾಗ ರಂಗೇರುವ ಬಾಯಿ ನಿಮ್ಮ ಪ್ರೇಮದ ಸಂಕೇತವೆಂದು ತಮಾಷೆಗೆ ಹೇಳುವುದುಂಟು. ಅದೇನೇ ಇರಲಿ, ಬಾಯಲ್ಲಿ ಪ್ರತೀ ಎಲೆಯೂ-ಅಡಿಕೆಯ ಜೊತೆಗೆ ರಮ್ಯವಾಗಿ, ಅಗೆತಕ್ಕೊಳಗಾಗಿ ಬಾಯೊಳಗೆ ಜೊಲ್ಲಿನ ರಸಭರಿತವಾಗಿ ಒಂದಷ್ಟು ಕಾಲ ಆನಂದದ ಮತ್ತೇರಿಸುವ ಪ್ರೇಮವಂತೂ ನಿಜವೇ ಅಲ್ಲವೇ!
ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಮ್ ಅಂಶ ಹೆಚ್ಚಿರುವ ಕಾರಣ ಇದನ್ನು ಊಟದ ಬಳಿಕ ಸೇವಿಸಿದರೆ ಜೀರ್ಣ ಶಕ್ತಿ ವರ್ಧಿಸಿ ಬಹುಪಾಲು ಗ್ಯಾಸ್ಟ್ರಿಕ್ ಸಮಸ್ಯೆಗಳು ಕಡಿಮೆ ಎಯಾಗುತ್ತವೆ.
ಅಡಿಕೆ ಮತ್ತು ವೀಳ್ಯೆಯದೆಲೆ ಎರಡನ್ನೂ ಭಾರತೀಯ ಸಂಸ್ಕೃತಿಯು ಸಂಬಂಧದಲ್ಲಿಟ್ಟು ಪೋಷಿಸಿದೆ. ಎರಡೂ ಮಲೇಷಿಯಾದಲ್ಲಿ ವಿಕಾಸಗೊಂಡವೆಂದು ನಂಬಲಾಗಿದ್ದರೂ ಇಲ್ಲಿನ ಸಸ್ಯಗಳೇ ಆಗಿವೆ! ಬರೀ ಎಲೆ ಅಥವಾ ಅಡಿಕೆಯನ್ನು ತಿನ್ನಲು ಆಗದು. ತಾಂಬೂಲ ಸೇವಿಸುವಾತನ ಬೆರಳ ಉಗುರಲ್ಲಿ ತೆಗೆಯಲು ಬರುವಷ್ಟು ಸುಣ್ಣವನ್ನು ಎಲೆಗೆ ಸವರಬೇಕು. ಇದು ತಾಂಬೂಲದಲ್ಲಿರಬೇಕಾದ ಸುಣ್ಣದ ಪ್ರಮಾಣ!
ಆಸ್ಟೆಯೋಪೋರೋಸಿಸ್ ಎಂಬ ಮೂಳೆ ಸಂಬಂಧಿ ರೋಗಕ್ಕೆ ವೀಳ್ಯದೆಲೆ ಮದ್ದು. ವೀಳ್ಯದ ರಸ ಸುಣ್ಣದಲ್ಲಿರುವ ಕ್ಯಾಲ್ಶಿಯಮ್ ಅಂಶಕ್ಕೆ ಬೆರೆತು ದೇಹದಲ್ಲಿ ಬಹುಬೇಗ ಹರಡಲ್ಪಡುವುದೇ ಇದಕ್ಕೆ ಕಾರಣ. ಚಿಗುರು ವೀಳ್ಯದೆಲೆ, ವಾತಹರ, ಉದರ ವಾಯುಹರ ಮತ್ತು ಉತ್ತೇಜನಕಾರಿ.
ಆಸ್ಟೆಯೋಪೋರೋಸಿಸ್ ಎಂಬ ಮೂಳೆ ಸಂಬಂಧಿ ರೋಗಕ್ಕೆ ವೀಳ್ಯದೆಲೆ ಮದ್ದು. ವೀಳ್ಯದ ರಸ ಸುಣ್ಣದಲ್ಲಿರುವ ಕ್ಯಾಲ್ಶಿಯಮ್ ಅಂಶಕ್ಕೆ ಬೆರೆತು ದೇಹದಲ್ಲಿ ಬಹುಬೇಗ ಹರಡಲ್ಪಡುವುದೇ ಇದಕ್ಕೆ ಕಾರಣ. ಚಿಗುರು ವೀಳ್ಯದೆಲೆ, ವಾತಹರ, ಉದರ ವಾಯುಹರ ಮತ್ತು ಉತ್ತೇಜನಕಾರಿ.
ಇನು ಕೇರಡಿಕೆ ಹ್ಯಾಗೆ ಮಾಡೋದೂಂತ ಹೇಳ್ತೀನಿ.
ಬೇಕಾಗುವ ಸಾಮಗ್ರಿಗಳು-
ಚಿಕಣಿ ಅಡಿಕೆ- ½ kg
ಲವಂಗ- 2 tsp
ಜಾಜಿ ಕಾಯಿ- 1 tsp
ಜೇಷ್ಠ ಮಧ ಪುಡಿ,4 tsp
ಒಣ ಕೊಬ್ಬರಿ 1/ 2 cup-1 cup
ಕೇರು ಬೀಜ-2
ಮನೆ ತುಪ್ಪ- 2 tsp
ಕುಂಬಳಕಾಯಿ ಬೀಜ. ¼ cup
ವಿಧಾನ
ಎಲ್ಲಕ್ಕೂ ಮೊದಲು ಕೇರು ಬೀಜ ಜಜ್ಜಿ ಕೊಬ್ಬರಿ ತುರಿಯಲ್ಲಿ ಸೇರಿಸಿ ಒಂದು ಬಟ್ಟೆಯಲ್ಲಿ ಕಟ್ಟಿ ನಾಲ್ಕು ದಿನಗಳವರೆಗೆ ಇಡಬೇಕು. ಇದು ದೇಹದಲ್ಲಿ ಶಾಖ ಉತ್ಪತ್ತಿ ಮಾಡುತ್ತದೆ.
ಬಳಿಕ ಎಲ್ಲಾ ವಸ್ತುಗಳನ್ನು ಸೇರಿಸಿ, ಮನೆ ತುಪ್ಪದಲ್ಲಿ ಹುರಿಯಬೇಕು.
ಕೊನೆಗೆ ಜೇಷ್ಠ ಮಧ ಪುಡಿಯನ್ನು ಹಾಕಬೇಕು. ಇದು ಗಂಟಲು ನೋವಿಗೆ ಒಳ್ಳೇದು.
ತಯಾರಾಯಿತು ನೋಡಿ ಕೇರಡಿಕೆ.
ಈ ಅಡಿಕೆಯಲ್ಲಿ ಏಲಕ್ಕಿ ಹಾಕುವುದಿಲ್ಲ. ಅದು ಶೀತ ಅಂತ.
ಚಿಗುರೆಲೆಗೆ ಸುಣ್ಣ ಸವರಿ, ಕೇರಡಿಕೆ ಹಾಕಿ ಮಾಡಿದ ತಾಂಬೂಲ ಎಲ್ಲಾ ಬಾಳಂತಿಯರಿಗೆ ಉತ್ತಮ ಮುಖ ಶುದ್ಧಿಯಾಗಿದೆ.

ಆಹಾ.. ಏನ್ ಸವಿರುಚಿ ಅಂತೀರಾ.. ನಾನಂತೂ ಚೆನ್ನಾಗಿ ಮೆಲ್ಲುತ್ತಾ ನನ್ನ ಬಾಳಂತನದ ದಿನಗಳನ್ನ ನೆನೆಸ್ತಾ ಇದ್ದೀನಿ..🥰🤣🥰

No comments:

Post a Comment